Monday 7 January 2019

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್




ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯಾಗಿ ಬಾಲಿವುಡ್ ನಟ ವಿವೇಕ್ ಒಬೇರಾಯ್ ನಟಿಸುತ್ತಿದ್ದು, ಫಸ್ಟ್ ಫೋಸ್ಟರ್ ನಲ್ಲಿ ಒಬೇರಾಯ್ ಪ್ರಧಾನಿಯಂತೆ ಕಾಣಿಸುತ್ತಿರುವುದು ವಿಶೇಷತೆಯಾಗಿದೆ.
ತುಂಬಾ ವರ್ಷಗಳಿಂದ ತೆರೆಮರೆಯಲ್ಲಿದ್ದ ವಿವೇಕ ಒಬೆರಾಯ್ ದೊಡ್ಡದೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಜೀವನಾಧಾರಿತ ಸಿನಿಮಾ ವಿವೇಕ್ ಸಿನಿ ಜೀವನಕ್ಕೆ ನೆರವಾಗಲಿದೆ ಎಂಬುದು ಆಪ್ತರ ಅನಿಸಿಕೆಯಾಗಿದೆ.



ಚಲನಚಿತ್ರ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಟ್ವೀಟರ್ ನಲ್ಲಿ ಸಿನಿಮಾದ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದು, ವಿವೇಕ್ ಆನಂದ್ ಒಬೆರಾಯ್(ವಿವೇಕ್ ಒಬೆರಾಯ್) ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಹೀರೋ..ಪ್ರಧಾನಿ ನರೇಂದ್ರ ಮೋದಿ ಸಿನಿಮಾದ ಮೊದಲ ಪೋಸ್ಟರ್ ಅನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 23 ಭಾಷೆಯಲ್ಲಿ ಬಿಡುಗಡೆಗೊಳಿಸಿದ್ದಾರೆ.
ಈ ಸಿನಿಮಾವನ್ನು ಓಮುಂಗ್ ಕುಮಾರ್ ನಿರ್ದೇಶಿಸಿದ್ದು, ಸುರೇಶ್ ಒಬೆರಾಯ್ ಮತ್ತು ಸಂದೀಪ್ ಸಿಂಗ್ ಸಿನಿಮಾದ ನಿರ್ಮಾಪಕರಾಗಿದ್ದಾರೆ ಎಂದು ವರದಿ ತಿಳಿಸಿದೆ.

https://twitter.com/taran_adarsh/status/1082229787186335744https://twitter.com/taran_adarsh/status/1082229787186335744

ಮಣಿಪಾಲ: ಸಿನಿಮಾ ಇಂಟರ್ವೆಲ್ ನಲ್ಲಿ ನವವಿವಾಹಿತೆ ನಾಪತ್ತೆ!



ಉಡುಪಿ: ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ದಂಪತಿ ಬಂದಿದ್ದು, ಇಂಟರ್ವೆಲ್ ವೇಳೆ ಶೌಚಾಲಯಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಪತ್ನಿ ನಾಪತ್ತೆಯಾಗಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ಕಟಪಾಡಿ ನಿವಾಸಿ ಪತಿ ಲಾಯ್ಡ್ ಮೊಂತೆರೋ ಮಣಿಪಾಲ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಕಳೆದ ಶುಕ್ರವಾರ ಮಣಿಪಾಲದ ಚಿತ್ರಮಂದಿರವೊಂದಕ್ಕೆ ಪತ್ನಿ ಜೊತೆ ತೆರಳಿದ್ದರು. ಏತನ್ಮಧ್ಯೆ ಸಿನಿಮಾ ಇಂಟರ್ವೆಲ್ ವೇಳೆ ಪತ್ನಿ ಜೆನ್ ಡಿ.ಕ್ರೂಸ್ ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದರು.
ಆದರೆ ಪತ್ನಿ ವಾಪಸ್ ಬಾರದೇ ಇರುವುದನ್ನು ಕಂಡ ಪತಿ ಲಾಯ್ಡ್ ಅವರು ಚಿತ್ರಮಂದಿರದಲ್ಲಿ ವಿಚಾರಿಸಿದ್ದರು. ಮನೆಗೂ ತೆರಳಿಲ್ಲ ಎಂಬುದು ಖಚಿತವಾದ ಮೇಲೆ ಮಣಿಪಾಲ ಠಾಣೆಯಲ್ಲಿ ನಾಪತ್ತೆಯಾಗಿರುವುದಾಗಿ ದೂರು ದಾಖಲಿಸಿದ್ದಾರೆ.
ಜೆನ್ ಮೂಲತಃ ಮೂಡುಬಿದಿರೆ ನಿವಾಸಿಯಾಗಿದ್ದು, ಮಂಗಳೂರಿನ ಹೋಟೆಲ್ ವೊಂದರಲ್ಲಿ ಉದ್ಯೋಗಿಯಾಗಿದ್ದರು. ಜೆನ್ ಮತ್ತು ಲಾಯ್ಡ್ 2018ರ ಡಿಸೆಂಬರ್ 31ರಂದು ವಿವಾಹವಾಗಿದ್ದರು. ಜೆನ್ ಅವರು ಕನ್ನಡ, ಕೊಂಕಣಿ, ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆ. ಚಿತ್ರಮಂದಿರದ ಸಿಸಿಟಿವಿ ಪರಿಶೀಲನೆ ನಡೆಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.


Sunday 6 January 2019

ಗಂಡು ಮೆಟ್ಟಿದ ನಾಡಲ್ಲಿ ನಟ ಸಾರ್ವಭೌಮ ಆಡಿಯೋ ಬಿಡುಗಡೆ: ಯುವರಾಜ್ ,ರಾಘಣ್ಣ, ರಚಿತಾ, ಮಸ್ತ್ ಡ್ಯಾನ್ಸ್.....

                                      Image result for natasarvabhouma audio release  
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅಭಿನಯದ ಬಹುನಿರೀಕ್ಷೆಯ ನಟ ಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಿನ್ನೆ ಅದ್ದೂರಿಯಾಗಿ ನಡೆಯಿತು.

ಈ ಮೊದಲು ಐಟಿ ಶಾಕ್  ಹಿನ್ನೆಲೆಯಲ್ಲಿ ಆಡಿಯೋ ಬಿಡುಗಡೆ ಬಗ್ಗೆ ಅನುಮಾನವಿತ್ತು. ಆದರೆ, ನಿನ್ನೆ ಮಧ್ಯಾಹ್ಯದ ವೇಳೆ ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಪುನೀತ್ ರಾಜ್  ಕುಮಾರ್,  ಫೇಸ್ ಬುಕ್ ಲೈವ್ ನಲ್ಲಿ  ಹುಬ್ಬಳ್ಳಿಗೆ ಬರುತ್ತಿರುವುದಾಗಿ ಅಭಿಮಾನಿಗಳಿಗೆ ಖುಷಿ ನೀಡಿದ್ದರು.

ನೆಹರೂ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಅಭಿಮಾನಿಗಳ ಹರ್ಷೋದ್ಘಾರದ ಮಧ್ಯೆ ನಟಸಾರ್ವಭೌಮ ಚಿತ್ರದ ಹಾಡುಗಳ  ಬಿಡುಗಡೆಯಾಯಿತು.
  ಈ ಚಿತ್ರದ ನಾಯಕಿ ರಚಿತಾರಾಮ್,  ಪುನೀತ್ ರಾಜ್ ಕುಮಾರ್ ಸಹೋದರ  ರಾಘವೇಂದ್ರ ರಾಜ್ ಕುಮಾರ್,  ಗುರು ವಿನಯ್ ಕುಮಾರ್ ಸೇರಿದಂತೆ  ಡಾ. ರಾಜ್ ಕುಮಾರ್ ಕುಟುಂಬದ  ಸದಸ್ಯರು ನಟಸಾರ್ವಭೌಮನ ಆಡಿಯೋ ಬಿಡುಗಡೆಗೆ ರಂಗು ತುಂಬಿದರು.

ಪುನೀತ್ ರಾಜ್ ಕುಮಾರ್  ಕ್ರೇನ್ ಮೂಲಕ ವೇದಿಕೆಗೆ ಎಂಟ್ರಿ ನೀಡುತ್ತಿದ್ದಂತೆ ಅಭಿಮಾನಿಗಳ ಜಯಘೋಷ ಮುಗಿಲುಮುಟ್ಟಿತು. ರಾಘವೇಂದ್ರ  ರಾಜ್ ಕುಮಾರ್ , ಅವರ ಕಿರಿಯ ಪುತ್ರ ಯುವರಾಜ್  ಹಾಗೂ ರಚಿತಾ ರಾಮ್ ನೃತ್ಯ ಅಭಿಮಾನಿಗಳ ಮನ ರಂಜಿಸಿತು.
ನಟ ಸಾರ್ವಭೌಮ ಚಿತ್ರದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್  ಕಾರ್ಯಕ್ರಮಕ್ಕೆ ಗೈರಾಗಿದ್ದರು.  ಫೆಬ್ರವರಿ ಮೊದಲ ವಾರದಲ್ಲಿ ನಟ ಸಾರ್ವಭೌಮ ಚಿತ್ರ ತೆರೆಗೆ ಅಪ್ಪಳಿಸಲಿದೆ.

ಆಪ್ ಡೌನ್ ಲೋಡ್ ಅಂಕಿ-ಅಂಶ: ಈ ವಿಷಯದಲ್ಲಿ ಭಾರತೀಯರೇ ಮುಂದು!


ಸ್ಮಾರ್ಟ್ ಫೋನ್ ಅತ್ಯಂತ ಸುಗಮವಾಗಿ ಕಾರ್ಯನಿರ್ವಹಿಸಬೇಕಾದರೆ 50 ಕ್ಕಿಂತ ಹೆಚ್ಚು ಆಪ್ ಗಳನ್ನು ಹೊಂದಿರುವುದು ಸೂಕ್ತವಲ್ಲ. ಕೆಲವೊಮ್ಮೆ 200 ಕ್ಕೂ ಹೆಚ್ಚು ಆಪ್ ಗಳಿರುತ್ತವೆ, ಆಪ್ ಗಳು ಹೆಚ್ಚಾದಷ್ಟೂ ಸ್ಮಾರ್ಟ್ ಫೋನ್ ಕಾರ್ಯಕ್ಷಮತೆ, ಭದ್ರತೆಗೂ ಕುತ್ತು ಹೆಚ್ಚು ಎಂದು ಟೆಕ್ ಎಆರ್ ಸಿ ವರದಿ ಹೇಳಿದೆ. 
ಟೆಕ್ಎಆರ್ ಸಿ ಡಿಜಿಟ್ ಇನ್ ಸೈಟ್ಸ್ ನ ಪ್ರಕಾರ, ಸ್ಮಾರ್ಟ್ ಫೋನ್ ನಲ್ಲಿ ಇನ್ಸ್ಟಾಲ್ ಆಗಿರುವ ಆಪ್ ಗಳ ಸರಾಸರಿ ಸಂಖ್ಯೆ 51. ಆದರೆ ಇದು 207 ನ್ನೂ ದಾಟಿರುವ ನಿದರ್ಶನಗಳಿದ್ದು, ಯೋಚನೆ ಮಾಡದೇ ಮನಸೋ ಇಚ್ಛೆ ಆಪ್ ಗಳನ್ನು ಡೌನ್ ಲೋಡ್ ಮಾಡಲಾಗುತ್ತಿರುವುದು ಸ್ಪಷ್ಟವಾಗಿದೆ ಎಂದು ವರದಿ ಹೇಳುತ್ತಿದೆ. 
ಈ ರೀತಿ ಮನಸೋ ಇಚ್ಛೆ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡರೆ, ಸ್ಮಾರ್ಟ್ ಫೋನ್ ಕಾರ್ಯಕ್ಷಮತೆಗೂ ಸಮಸ್ಯೆಯಾಗುವುದಷ್ಟೇ ಅಲ್ಲದೇ ಭದ್ರತೆಗೂ ಕುತ್ತು ಬರಲಿದೆ ಎಂದು ವರದಿ ಎಚ್ಚರಿಸಿದೆ. ಭಾರತೀಯರ ಸ್ಮಾರ್ಟ್ ಫೋನ್ ಗಳಲ್ಲಿ 24 ಆಪ್ ಗಳಿದ್ದು ಅಗತ್ಯವಿದ್ದಷ್ಟೇ ಆಪ್ ಗಳನ್ನು ಡೌನ್ ಲೋಡ್ ಮಾಡಿ ಬಳಕೆ ಮಾಡುತ್ತಿದ್ದು, ಭಾರತೀಯರೇ ಉತ್ತಮ ಎನ್ನುತ್ತಿದೆ ವರದಿ. 
ಭಾರತದ ಸ್ಮಾರ್ಟ್ ಫೋನ್ ಬಳಕೆದಾರರ ಪೈಕಿ ಶೇ.38 ರಷ್ಟು ಮಂದಿ 6-10 ಆಪ್ ಗಳನ್ನು ದಿನ ನಿತ್ಯ ಬಳಕೆ ಮಾಡುತ್ತಾರೆ. ಈ ಪೈಕಿ ಅತಿ ಹೆಚ್ಚು ಬಳಕೆ ಮಾಡುವುದು ಸೋಶಿಯಲ್ ಮೀಡಿಯಾ ಆಪ್ ಗಳನ್ನೇ ಎಂದು ವರದಿ ಹೇಳಿದೆ.  ಶೇ.47 ರಷ್ಟು ಮಂದಿ ಆರ್ಥಿಕ ವಿಚಾರಕ್ಕೆ ಸಂಬಂಧಪಟ್ಟ ಆಪ್ ಗಳನ್ನು ಬಳಕೆ ಮಾಡುತ್ತಿದ್ದಾರೆ. ಜಾಗತಿಕವಾಗಿ ಗೇಮಿಂಗ್ ಹಾಗೂ ಮನರಂಜನಾ ಆಪ್ ಗಳು ಹೆಚ್ಚು ಡೌನ್ ಲೋಡ್ ಆಗುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ. 

ಸ್ಯಾಂಡಲ್‍ವುಡ್ ಐಟಿ ದಾಳಿ: 11 ಕೋಟಿ ರು. ಆಸ್ತಿ ಜಪ್ತಿ, 109 ಕೋಟಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆ.


ಬೆಂಗಳೂರು: ಸ್ಯಾಂಡಲ್‌ಪುಡ್‌ ನಾಲ್ವರು ಖ್ಯಾತ ನಟರ ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ  2.85 ಕೋಟಿ ರುಪಾಯಿ ನಗದು ಸೇರಿದಂತೆ ಒಟ್ಟು 11 ಕೋಟಿ ರುಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅಲ್ಲದೆ 109 ಕೋಟಿ ರುಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ. 
ದಾಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಇಂದು ಅಧಿಕೃತ ಪ್ರಕಟಣೆ ನೀಡಿದ್ದು,  ಒಟ್ಟು 21 ಕಡೆ ಏಕ ಕಾಲಕ್ಕೆ ನಡೆಸಿದ ದಾಳಿಯಲ್ಲಿ 2.85 ಕೋಟಿ ನಗದು,  25.3 ಕೆ.ಜಿ ಚಿನ್ನಾಭರಣ ಸೇರಿ 11 ಕೋಟಿ ರುಪಾಯಿ ಮೌಲ್ಯದ ಜಪ್ತಿ ಮಾಡಲಾಗಿದೆ ಮತ್ತು 109 ಕೋಟಿ ರುಪಾಯಿ ಮೌಲ್ಯದ ಅಘೋಷಿತ ಆಸ್ತಿ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಇದು ನಟರು, ನಿರ್ಮಾಪಕರು ಒಪ್ಪಿರುವ ಅಘೋಷಿತ ಆಸ್ತಿಯಾಗಿದೆ. ಆದಾಯದ ಜತೆಗೆ ಇನ್ನಷ್ಟು ಪ್ರಮುಖ ದಾಖಲೆಗಳು ಪತ್ತೆಯಾಗಿವೆ. ಅವುಗಳು ಅಘೋಷಿತ ಆಸ್ತಿ ಎಂದು ಒಪ್ಪಿಕೊಂಡಿಲ್ಲ. ಅದೂ ಸೇರಿದರೆ ಅಘೋಷಿತ ಆಸ್ತಿ ಮೌಲ್ಯ ಇನ್ನು ಬಹಳ ದೊಡ್ಡದಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 
ಜಾರಿ ನಿರ್ದೇಶನಾಲಯಕ್ಕೂ ಐಟಿ ಇಲಾಖೆ ಮಾಹಿತಿ ರವಾನೆ ಮಾಡಿದ್ದು ಪ್ರಕರಣ ವರ್ಗಾವಣೆ ಆದರೆ ಸ್ಯಾಂಡಲ್‌ವುಡ್‌ ದಿಗ್ಗಜರಿಗೆ ಸಂಕಷ್ಟ ಎದುರಾಗಬಹುದು. 
ಮೂರು ತಿಂಗಳ ಕಾಲ ಗೌಪ್ಯ ತನಿಖೆ ನಡೆಸಿ ಈ ದಾಳಿ ನಡೆಸಲಾಗಿದ್ದು, ತೆರಿಗೆ ವಂಚನೆ ಅವ್ಯವಹಾರದ ಕುರಿತು ಶೀಘ್ರದಲ್ಲೇ ಕ್ರಿಮಿನಲ್‌ ಪ್ರಕರಣ ದಾಖಲಿಸುವುದಾಗಿ ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರಮಂದಿರದಲ್ಲಿ ದಾಖಲೆ ರಹಿತವಾಗಿ ಸಂಗ್ರಹಿಸಿದ ನಗದು,ಆಡಿಯೋ ಹಕ್ಕು, ಡಿಜಿಟಲ್‌ ಹಕ್ಕುಗಳ ಮೂಲದ ಅವ್ಯವಹಾರ ನಡೆಸಿದ ಹಣ  ಇದಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಆದರೆ ದಾಳಿಯಲ್ಲಿ ವೈಯಕ್ತಿಕವಾಗಿ ಯಾರ ಬಳಿ ಎಷ್ಟು ಸಂಪತ್ತು ಪತ್ತೆಯಾಗಿದೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸದೆ ಜಾಣತನ ತೋರಿದ್ದಾರೆ. 
ಪ್ರಖ್ಯಾತ ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಮತ್ತು ಯಶ್‌, ನಿರ್ಮಾಪಕರಾದ ರಾಕ್‌ಲೈನ್‌ ವೆಂಕಟೇಶ್‌,ಸಿ.ಆರ್‌.ಮನೋಹರ್‌, ವಿಜಯ್‌ ಕಿರಗಂದೂರು ಮತ್ತು  ಜಯಣ್ಣ ಅವರ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ಗುರುವಾರ ಬೆಳಗ್ಗೆ ದಾಳಿ ನಡೆಸಿ 2 ದಿನಗಳ ಕಾಲ ನಿರಂತರ ದಾಖಲೆಗಳ ಪರಿಶೀಲನೆ ನಡೆಸಿದ್ದರು. 

ಸ್ಯಾಂಡಲ್‍ವುಡ್ ಐಟಿ ದಾಳಿ ಪ್ರಕರಣ – ಸಿಕ್ಕಿದ್ದು ಕೋಟಿ ಕೋಟಿ ಆಸ್ತಿ !

ಬೆಂಗಳೂರು: ಚಂದನವನದ ನಟ, ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ಪ್ರಕರಣಕ್ಕೆ ಸಂಬಂಧಿದಂತೆ ಐಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಬರೋಬ್ಬರಿ 109 ಕೋಟಿ ರೂ. ಮೌಲ್ಯದ ಅಘೋಷಿತ ಆದಾಯದ ದಾಖಲೆ ಹಾಗೂ 25.3 ಕೆಜಿ ಚಿನ್ನಾಭರಣ, 2.85 ಕೋಟಿ ರೂ. ನಗದು ವಶಕ್ಕೆ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸಿನಿಮಾ ಕ್ಷೇತ್ರ ವಿವಿಧ ನಟ, ನಿರ್ಮಾಪಕರ ಮೇಲೆ ನಡೆದ ಈ ದಾಳಿಯಲ್ಲಿ ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ 180 ಅಧಿಕಾರಿಗಳು ಭಾಗವಹಿಸಿದ್ದು, 21 ಕಡೆ ದಾಳಿ ಮಾಡಿ ಇದರಲ್ಲಿ 5 ಸ್ಥಳಗಳಲ್ಲಿ ಹುಡುಕಾಟವನ್ನು ನಡೆಸಲಾಗಿದೆ.ದಾಳಿ ನಡೆಸಲು ಇಲಾಖೆ ಕಳೆದ 3 ತಿಂಗಳಿನಿಂದ ಕೂಡ ಮಾಹಿತಿ ಸಂಗ್ರಹಿಸಿದ್ದು, ಈ ವೇಳೆ ಗುರುತಿಸಲಾದ ವ್ಯಕ್ತಿಗಳು ಹಾಗೂ ಸ್ಥಳಗಳ ಮೇಲೆ ದಾಳಿ ನಡೆದಿದೆ. ಇದರಲ್ಲಿ ಸಿನಿಮಾ ನಿಮಾರ್ಪಕರು, ನಟರು, ಸಿನಿಮಾ ಸಂಸ್ಥೆಗಳು ಕೂಡ ಸೇರಿದೆ. ದಾಳಿಯ ವೇಳೆ ಆಘೋಷಿತ ಆಸ್ತಿ, ಹಣ ಸೇರಿದಂತೆ ವಿವಿಧ ಆದಾಯಕ್ಕೆ ಸಂಬಂಧಿಸಿದ ದಾಖಲೆಗಳು ಕೂಡ ಲಭ್ಯವಾಗಿದೆ. ಪ್ರಮುಖವಾಗಿ ಸಿನಿಮಾ ರಂಗದಲ್ಲಿ ಚಿತ್ರಮಂದಿರದಿಂದ ಬರುವ ಆದಾಯವನ್ನು ಬೇರೆಡೆ ವರ್ಗಾವಣೆ ಮಾಡಿ ಹೂಡಿಕೆ ಮಾಡಿರುವ ಬಗ್ಗೆ ತಿಳಿದುಬಂದಿದ್ದು, ಬಹು ದೊಡ್ಡ ಆರ್ಥಿಕ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಸಿನಿಮಾ ಹಕ್ಕುಗಳ ಮಾರಾಟ, ಡಿಜಿಟಲ್ ರೈಟ್ಸ್, ಚಿತ್ರ ಮಂದಿರದ ಆದಾಯ, ಟಿವಿ ಹಕ್ಕುಗಳು, ಆಡಿಯೋ ಮತ್ತು ಸ್ಯಾಟಲೈಟ್ ಹಕ್ಕುಗಳು ಸೇರಿದಂತೆ ಇತರೇ ಮೂಲಗಳಿಂದ ಗಳಿಸಿದ ಆದಾಯದ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.
ಸಿನಿಮಾದಿಂದ ಪಡೆದ ಆದಾಯದೊಂದಿಗೆ ಬೇರೆ ಬೇರೆ ವ್ಯವಹಾರಗಳಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸ್ಪಷ್ಟವಾಗಿದ್ದು, ಈ ಮೂಲಗಳಿಂದ ಬಂದ ಆದಾಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆದ್ದರಿಂದ ಒಟ್ಟು ಮೊತ್ತದಲ್ಲಿ ಹೆಚ್ಚಾಗುವ ಸಾಧ್ಯತೆಯ ಬಗ್ಗೆಯೂ ಐಟಿ ಇಲಾಖೆ ತಿಳಿಸಿದೆ. ಐಟಿ ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿಯನ್ನು ಇಡಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಒಂದೊಮ್ಮೆ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಪ್ರವೇಶ ಪಡೆದರೆ ಎಲ್ಲರಿಗೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ತೆರಿಗೆ ವಂಚನೆ ಮಾಡಲು ಹಣ ವರ್ಗಾವಣೆ ಮಾಡಿರುವುದು ಸಾಬೀತಾದರೆ ಇಡಿ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಐಟಿ ಕಾಯ್ದೆ 278 (ಡಿ) ಅಡಿ ಪ್ರಕರಣ ದಾಖಲಿಸಲು ಐಟಿ ಅಧಿಕಾರಿಗಳು ನಿರ್ಧಾರ ಮಾಡಿದ್ದಾರೆ.
ಕಳೆದ 3 ದಿನಗಳಿಂದ ನಡೆದ ದಾಳಿಯ ವೇಳೆ ಪತ್ತೆಯಾದ ಆಸ್ತಿ, ಹಣ, ಆದಾಯದ ಒಟ್ಟು ಮಾಹಿತಿಯನ್ನು ಮಾತ್ರ ಐಟಿ ಅಧಿಕಾರಿಗಳು ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ಯಾವುದೇ ನಟ, ನಿರ್ಮಾಪಕರ ಮನೆಯಲ್ಲಿ ಎಷ್ಟು ಹಣ ಲಭಿಸಿದೆ ಎಂಬ ಬಗ್ಗೆ ಮಾಹಿತಿ ನೀಡಿಬೇಕಿದೆ. ಸದ್ಯ ಐಟಿ ಇಲಾಖೆ ವಶಕ್ಕೆ ಪಡೆದಿರುವ ಆದಾಯ ಹಾಗೂ ಹಣದ ಬಗ್ಗೆ ನಾಳೆಯಿಂದ ವಿಚಾರಣೆ ನಡೆಸುವ ಸಾಧ್ಯತೆ ಇದೆ. ನಟ ಹಾಗೂ ನಿರ್ಮಾಪಕರು ಐಟಿ ಇಲಾಖೆಗೆ ಆಗಮಿಸಿ ಸೂಕ್ತ ದಾಖಲೆ ಹಾಗೂ ಸ್ಪಷ್ಟನೆ ನೀಡಲು ಅವಕಾಶ ಇದೆ. ಜನವರಿ 3 ರಂದು ನಡೆದ ಐಟಿ ದಾಳಿಯಲ್ಲಿ ನಾಲ್ವರು ನಿರ್ಮಾಪಕರು ಹಾಗೂ ನಾಲ್ವರು ಸ್ಟಾರ್ ನಟರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ನಿಲ್ಲದ ಕೆಜಿಎಫ್ ಹವಾ: ಹಿಂದಿ ಸ್ಕ್ರೀನ್ ಗಳ ಸಂಖ್ಯೆ 780ರಿಂದ 951ಕ್ಕೆ ಏರಿಕೆ...!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ತನ್ನ ನಾಗಾಲೋಟ ಮುಂದುವರೆಸಿದ್ದು, ಹಿಂದಿ ಭಾಷೆಯ ಸ್ಕ್ರೀನ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.
ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಐದು ಭಾಷೆಗಳಲ್ಲಿ ಬಿಡುಗಡೆಯೊಂದಿಗೆ ದಾಖಲೆ ಬರೆದಿದ್ದ ನಟ ಯಶ್ ಅಭಿನಯದ ಕೆಜಿಎಫ್ ಸಿನಿಮಾ, ಗಲ್ಲ ಪೆಟ್ಟಿಗೆಯಲ್ಲಿ ತನ್ನ ಗಳಿಕೆಯನ್ನು ಮುಂದುವರಿಸಿದೆ. ಈ ವರೆಗೂ ಕೆಜಿಎಫ್ ಚಿತ್ರ ಹಿಂದಿ ಭಾಷೆಯಲ್ಲಿ ಮಾತ್ರವೇ ಸುಮಾರು 32 ಕೋಟಿ ಗೂ ಅಧಿಕ ರೂ ಗಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಅಲ್ಲದೆ ಬಿಡುಗಡೆಯಾಗಿ ಮೂರು ವರಗಳೇ ಕಳೆದರೂ ಕೆಜಿಎಫ್ ಚಿತ್ರದ ಸ್ಕೀನ್ ಗಳ ಸಂಖ್ಯೆ ಕಡಿಮೆಯಾಗಿಲ್ಲ. ಬದಲಿಗೆ ಬಿಡುಗಡೆಯಾಗುತ್ತಿರುವ ಹೊಸ ಚಿತ್ರಗಳಿಗೂ ಸವಾಲೆಸೆಯುವಂತೆ ತನ್ನ ಸ್ಕ್ರೀನ್ ಗಳ ಸಂಖ್ಯೆಯನ್ನು ವೃದ್ಧಿಸಿಕೊಂಡಿದೆ.  ಡಿ. 28ರ ಶುಕ್ರವಾರ 1.25 ಕೋಟಿ ರೂ., ಶನಿವಾರ 1.75 ಕೋಟಿ ರೂ., ಭಾನುವಾರ 2.25 ಕೋಟಿ ರೂ., ಸೋಮವಾರ 1.50 ಕೋಟಿ ರೂ., ಮಂಗಳವಾರ 2.25 ಕೋಟಿ ರೂ. ಬುಧವಾರ 1.30 ಕೋಟಿ ರೂ. ಹಾಗೂ ಗುರುವಾರ 1.20 ಕೋಟಿ ರೂ. ಆದಾಯಗಳಿಸಿದೆ.
ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲಿ 21.45 ಕೋಟಿ ರೂ. 2ನೇ ವಾರದಲ್ಲಿ 11.50 ಕೋಟಿ ರೂ. ಗಳಿಕೆಯೊಂದಿಗೆ ಒಟ್ಟು 39.95 ಕೋಟಿ ರೂ. ಗಳಿಸಿದೆ. ಅಲ್ಲದೇ 2ನೇ ವಾರದಲ್ಲಿ 780 ಪರದೆಗಳಲ್ಲಿ ಪ್ರದರ್ಶನವಾಗುತ್ತಿದ್ದ ಕೆಜಿಎಫ್ 3ನೇ ವಾರಕ್ಕೆ ಈ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು ಈ ಹಿಂದೆ 780 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಕೆಜಿಎಫ್ ಚಿತ್ರ ಇದೀಗ ಒಟ್ಟಾರೆ 951 ಪರದೆಗಳಲ್ಲಿ ಪ್ರದರ್ಶನವಾಗುತ್ತಿದೆ. 
ಹಿಂದಿ ಸಿನಿಮಾದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಮುಂಬೈಗೆ ಯಶ್ ತೆರಳಿದ್ದರು. ಐಟಿ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳನ್ನ ರದ್ದುಪಡಿಸಿ ಗುರುವಾರ ಬೆಂಗಳೂರಿಗೆ ಮರಳಿದ್ದರು.
https://twitter.com/taran_adarsh/status/1081140998829334529

Saturday 5 January 2019

ನಾನು ಉತ್ತಮವಾದದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತೇನೆ: ಅದಿತಿ ಪ್ರಭುದೇವ
ಬೆಂಗಳೂರು: ಅದಿತಿ ಪ್ರಭುದೇವ ಕನ್ನಡ ಸಿನಿಮಾ ರಸಿಕರಿಗೆ ಅಪರಿಚಿತರಲ್ಲ, ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಅದಿತಿ ಹಿರಿತೆರೆಗೆ ಧೈರ್ಯಂ ಸಿನಿಮಾ ಮೂಲಕ 

ಪಾದಾರ್ಪಣೆ ಮಾಡಿದ್ದಾರೆ. 

ಅದಿತಿ ಬಜಾರ್ ಸಿನಿಮಾದಲ್ಲೂ ನಟಿಸಿದ್ದಾರೆ ಚಮಕ್‌' ನಂತರ "ಬಜಾರ್‌' ಎಂಬ ಹೊಸ ಚಿತ್ರವನ್ನು ಸುನಿ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಅಲ್ಲದೇ ಚಿತ್ರದ ಪೋಸ್ಟರ್, ಹಾಡುಗಳು ಹಾಗೂ ಟ್ರೈಲರ್ ಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಇದೀಗ ಚಿತ್ರತಂಡ ಚಿತ್ರದ ಮತ್ತೊಂದು ಟ್ರೈಲರ್ ಬಿಡುಗಡೆ ಮಾಡಿದೆ. ಅಲ್ಲದೆ ಟ್ರೈಲರ್ ನೋಡಿದ ಸಿನಿರಸಿಕರಿಂದ ಬೊಂಬಾಟ್ ಪ್ರತಿಕ್ರಿಯೆ ವ್ಯಕ್ತವಾಗಿದೆ.
"ಪಾರಿವಾಳ ಪ್ರೀತಿಯ ಸಂಕೇತ, ಪಾರಿವಾಳ ಶಾಂತಿಯ ಪ್ರತೀಕ. ಆದರೆ ನಿಮಗೆ ಗೊತ್ತಿಲ್ಲದ ಬೇರೆ ಪಾರಿವಾಳದ ಲೋಕವೊಂದಿದೆ' ಎನ್ನುವ ಡೈಲಾಗ್​ ಮೂಲಕ ಟ್ರೈಲರ್ ಆರಂಭವಾಗುತ್ತದೆ. ನೋಡಲು ಪಕ್ಕಾ ಕಮರ್ಷಿಯಲ್ ಸಿನಿಮಾದಂತೆ ಕಾಣಿಸುತ್ತಿರುವ "ಬಜಾರ್' ಸಿನಿಮಾ ಅಂಡರ್ ವರ್ಲ್ಡ್ ಕಥಾಹಂದರವನ್ನೊಳಗೊಂಡಿದ್ದು, ಈ ಚಿತ್ರದಲ್ಲಿ ಪ್ರೇಮ ಸಂದೇಶ ಸಾರುವ ಪಾರಿವಾಳಕ್ಕೂ ಪ್ರಮುಖ ಪಾತ್ರವಿದೆ.
ಎಂಬಿಎ  ಮತ್ತು ಎಂಜಿನೀಯರ್ ಪದವಿಧರೆಯಾಗಿರುವ ಅದಿತಿ ಸಿನಿಮಾ ರಂಗಕ್ಕೆ ಯಾವುದೇ ತಯಾರಿಲ್ಲದೇ ಪ್ರವೇಶಿಸಿದರು. ಬ್ಯಾಂಕ್ ಮ್ಯಾನೇರ್ ಆಗಲು  ಬಯಸಿದ್ದರು.
ನಾನು ಹಲವಾರು ಆಡಿಶನ್ ಗಳಲ್ಲಿ ಭಾಗಹಿಸಿದ್ದೇನೆ,  ಬಜಾರ್ ನಂತರ  ಹಲವು ಕಥೆಗಳು ಬಂದವು, ಆಪರೇಷನ್ ನಕ್ಷತ್ರ,  ತೋತೋಪುರಿ ಸೇರಿದಂತೆ ಹಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ. ನಾನು ಮೊದಲಿಗೆ ಕಥೆ  ಓದುತ್ತೇನೆ, ಕಥೆ ನನ್ನ ಪಾತ್ರಕ್ಕೆ ಒಪ್ಪುತ್ತದೆ ಎಂದಾದರೇ ಮಾತ್ರ ನಾನು ಸಹಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬಜಾರ್  ಸಿನಿಮಾದಲ್ಲಿ  ಪಾರಿವಾಳಗಳ ಬೆಟ್ಟಿಂಗ್‍ನಲ್ಲಿ ನಡೆಯುವ ಪ್ರೇಮಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. "ಬಜಾರ್‌' ಚಿತ್ರದ ಮೂಲಕ ಧನ್‌ವೀರ್‌ ಎಂಬ ಹೊಸ ನಟನನ್ನು ಸುನಿ ಕನ್ನಡಕ್ಕೆ ಪರಿಚಯಿಸುತ್ತಿದ್ದು, ಧನ್‌ವೀರ್‌ ಎದುರು ನಾಯಕಿಯಾಗಿ "ಧೈರ್ಯಂ'ನ ಅದಿತಿ ಪ್ರಭುದೇವ ನಟಿಸುತ್ತಿದ್ದಾರೆ. "ಬಜಾರ್‌' ಚಿತ್ರವನ್ನು ಭಾರತಿ ಫಿಲಂ ಪ್ರೊಡಕ್ಷನ್ಸ್‌ನಡಿ ತಿಮ್ಮೇಗೌಡ ನಿರ್ಮಿಸುತ್ತಿದ್ದು, ಎಂ.ಎಲ್‌. ಪ್ರಸನ್ನ ಅವರ ಕಥೆಗೆ ಸುನಿ ಚಿತ್ರಕಥೆ ರಚಿಸಿದ್ದಾರೆ.

ಐಟಿ ಅಧಿಕಾರಿಗಳ ಶೋಧ ಅಂತ್ಯ: ಆಕ್ರೋಶಗೊಂಡ ರಾಕಿ ಭಾಯ್ ಹೇಳಿದ್ದೇನು?

ಬೆಂಗಳೂರು: ಅಂತೂ ಮೂರು ದಿನಗಳ ಶೋಧದ ಬಳಿಕ ಆದಾಯ ತೆರಿಗೆ ಅಧಿಕಾರಿಗಳು ರಾಕಿಂಗ್ ಸ್ಟಾರ್ ಯಶ್ ಮನೆಯಿಂದ ಹೊರಹೋಗಿದ್ದು ಈ ಸಂಬಂಧ ಯಶ್ ಮಾತನಾಡಿದ್ದಾರೆ. 
ಐಟಿ ಅಧಿಕಾರಿಗಳ ಶೋಧ ಅಂತ್ಯದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಶ್, ಕೆಜಿಎಫ್ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ವಿಚಾರಕ್ಕೆ ನಮ್ಮ ಮನೆ ಮೇಲೆ ದಾಳಿ ನಡೆದಿದೆ ಅಂತೆಲ್ಲಾ ಊಹಾಪೋಹಾ ಹಬ್ಬಿಸಬಾರದು ಎಂದು ಹೇಳಿದ್ದಾರೆ. 
ಐಟಿ ದಾಳಿ ಸಂಬಂಧ ಕೇವಲ ಊಹಾಪೋಹಗಳ ಮಾತೇ ಕೇಳಿ ಬರುತ್ತಿವೆ ಎಂದು ಯಶ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟು ಸಿಕ್ತು ಇಷ್ಟು ಸಿಕ್ತು ಎಂದು ಊಹಾಪೋಹಗಳನ್ನ ಹಬ್ಬಿಸಲಾಗಿದೆ. ಬುಲ್ ಷಿಟ್ ಗಳನ್ನ ತೋರಿಸಬಾರದು. ಎರಡು ದಿನ ನನ್ನ ಹೆಂಡತಿ ಹಾಗೂ ಮಗಳನ್ನು ಬಿಟ್ಟಿದ್ದದ್ದು ಕಷ್ಟವಾಗಿತ್ತು ಎಂದರು. 
ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆ. ಮುಂದೆ ಈ ವಿಚಾರಕ್ಕೆ ಕರೆದರೆ ಖಂಡಿತ ಹೋಗುತ್ತೇನೆ ಎಂದರು.

ಭಾರತದಲ್ಲಿ ಭಿನ್ನಾಭಿಪ್ರಾಯಕ್ಕೆ ಜಾಗವೇ ಇಲ್ಲ: ನಾಸಿರುದ್ದೀನ್ ಶಾ ಬೇಸರ.
ಇತ್ತೀಚೆಗಷ್ಟೇ ತಮ್ಮ ಹೇಳಿಕೆಯಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನಟ ನಾಸಿರುದ್ದೀನ್ ಶಾ, ಈಗ ಮತ್ತೊಮ್ಮೆ ಭಾರತದ ಬಗ್ಗೆ ಮಾತನಾಡಿದ್ದಾರೆ. 

ಈ ಹಿಂದೆ ಭಾರತದಲ್ಲಿ ಕೆಲವರಿಗೆ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿದ್ದ ನಾಸಿರುದ್ದೀನ್ ಶಾ, ಈಗ ಭಾರತದಲ್ಲಿ ಅಭಿಪ್ರಾಯ ಭೇದಕ್ಕೆ ಜಾಗವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ವಿಡಿಯೋ ಮಾಡಿರುವ ನಾಸಿರುದ್ದೀನ್ ಶಾ, ಹಕ್ಕುಗಳನ್ನು ಯಾರು ಕೇಳುತ್ತಾರೋ ಅವರಿಗೆ ಬೀಗ ಜಡಿಯಲಾಗುತ್ತದೆ, ನಟರು, ಕಲಾವಿದರು, ಸಾಹಿತಿಗಳು, ವಿದ್ವಾಂಸರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಇಷ್ಟೇ ಅಲ್ಲದೇ ಪತ್ರಕರ್ತರನ್ನೂ ಸಹ ಸುಮ್ಮನಾಗಿಸಲಾಗುತ್ತಿದೆ ಎಂದು ನಾಸಿರುದ್ಧೀನ್ ಶಾ ಆರೋಪಿಸಿದ್ದಾರೆ. 
ನಾಸಿರುದ್ದೀನ್ ಶಾ ಅವರ ಪ್ರಕಾರ, ದೇಶದಲ್ಲಿ ದ್ವೇಷದ ಗೋಡೆಗಳನ್ನು ಧರ್ಮದ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದಾಗಿ ಧರ್ಮದ ಹೆಸರಿನಲ್ಲಿ ಮುಗ್ಧ ಜನರ ಹತ್ಯೆಗಳಾಗುತ್ತಿವೆ, ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರ ಮನೆ ಮೇಲೆ ರೇಡ್ ಗಳಾಗುತ್ತಿವೆ ಪರವಾನಗಿಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ನಾಸಿರುದ್ದೀನ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಿಮ್ಮಿಕ್ ಚಿತ್ರದ ಪೋಸ್ಟರ್ ರಿಲೀಸ್.

ಬೆಂಗಳೂರು: 2018 ರಲ್ಲಿ ಗಣೇಶ್ ಅಭಿನಯದ ಆರೇಂಜ್ ಸಿನಿಮಾ ತೆರೆ ಕಂಡಿದ್ದು, ಸದ್ಯ ಗಣೇಶ್ ಕೈಯ್ಯಲ್ಲಿ ಮೂರು ಪ್ರಾಜೆಕ್ಟ್ ಗಳಿವೆ,  ಸದ್ಯ ಗಣೇಶ್ ಗಿಮ್ಮಿಕ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದೆ.
ನಾಗಣ್ಣ ನಿರ್ದೇಶನದ ಗಿಮ್ಮಿಕ್ ಹಾರರ್ -ಕಾಮಿಡಿ ಸಿನಿಮಾವಾಗಿದ್ದು, 2019ರಲ್ಲಿ  ತೆರೆ ಕಾಣುವ  ಗಣೇಶ್ ಅಭಿನಯದ ಮೊದಲ ಸಿನಿಮಾ ಇದಾಗಿದೆ,  ಶ್ರೀಲಂಕಾದ ಮನೆಯೊಂದರಲ್ಲಿ ಹೆಚ್ಚಿನ ಪ್ರಮಾಣದ ಶೂಟಿಂಗ್ ಮಾಡಲಾಗಿದೆ. ಜೊತೆಗೆ ಮೈಸೂರು ಹಾಗೂ ಬೆಂಗಳೂರಿನಲ್ಲೂ ಕೂಡ ಶೂಟಿಂಗ್ ಮಾಡಲಾಗಿದೆ, 
ಗಿಮ್ಮಿಕ್ ನಲ್ಲಿ ರೋನಿಕಾ ಸಿಂಗ್  ರವಿಶಂಕರ್ ಗೌಡ. ಸಾಧು ಕೋಕಿಲಾ,  ಶೋಭರಾಜ್, ಸುಂದರ್ ರಾಜ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಜೀವನಾಧಾರಿತ ಸಿನಿಮಾದ ಫಸ್ಟ್ ಲುಕ್...